ಬೋನಿನಲ್ಲಿ ಇದ್ದ ಹುಲಿ ತಪ್ಪಿಸಿಕೊಂಡು ಹೋದಾಗ ಅದನ್ನು ಮರಳಿ ಬರುವಂತೆ ಮಾಡಿದ ಸಿದ್ಧಾರೂಢ
🌳ಸಿದ್ಧಾರೂಢರು ಸರ್ಕಸ್ ಕಂಪನಿಯ ಕಾಶೀನಾಥಪಂತ ಛತ್ರೆಗೆ ಚೀನಾದಲ್ಲಿ ತೋರಿದ ಮಹಿಮೆ ಕಥೆ
ಮಹಾಶಿವರಾತ್ರಿ ಸಪ್ತಾಹದ ಕಾಲಕ್ಕೆ ಯಾತ್ರಿಕರ ಮನೋರಂಜನೆಗಾಗಿ ಮಹಾರಾಷ್ಟ್ರದಿಂದ ಶ್ರೀ ಕಾಶಿನಾಥ ಪಂತ ಛತ್ರೆ ಸರ್ಕಸ್ ನಡೆಸುತ್ತಾ ಶ್ರೀಗಳ ಮಠದಲ್ಲಿ ವಾಸ ಮಾಡಿ ಶ್ರವಣಮೃತ ಪಾನದಲ್ಲಿ ರತರಾಗುತ್ತಿದ್ದರು. ಶ್ರವಣದ ಫಲಶೃತಿಯಿಂದ ಭಕ್ತರಾದರು. ದೇಶ ವಿದೇಶಗಳಲ್ಲಿ ಸರ್ಕಸ್ ನಡೆಸುತ್ತಾ, ಚೀನಾ ದೇಶದ ರಾಜಧಾನಿ ಪೇಕಿಂಗದಲ್ಲಿ ಸರ್ಕಸ್ ಕಂಪನಿ ಕಾರ್ಯಾರಂಭ ಮಾಡಿತು. ಒಂದಾನೊಂದು ದಿನ ಚಾಕರನು ಆಹಾರ ಹಾಕಲು ಪಂಜರದ ಬಾಗಿಲು ತೆರೆದ ಕೂಡಲೇ ಶಂಕರ ನಾಮದ ಹುಲಿಯು ಠಣ್ಣನೆ ಜಿಗಿದು, ನಗರದಲ್ಲಿ ಓಡಾಡತೊಡಗಿತು. ಬೀದಿಯಲ್ಲಿ ಹುಲಿಯನ್ನು ಕಂಡು ಭಯಭೀತರಾದ ಜನರು ಓಡತೊಡಗಿದರು. ಹಾಗೂ ಮನೆಯ ಬಾಗಿಲು ಮುಚ್ಚಿಕೊಂಡರು. ಮುಂದೆ ಆ ಹುಲಿಯು ತಿರುಗುತ್ತಾ, ಊರ ಹೊರಗಿನ ಗಿಡ ಕಂಟಿಗಳಲ್ಲಿ ಅಡಗಿ ಕೂತಿತು, ಈ ವಾರ್ತೆಯನ್ನು ಕೇಳಿದ ಚೀನಾದಲ್ಲಿ ಆಗ ಆಳುತ್ತಿದ್ದ ಮಹಾರಾಣಿಯು ೨೪ ಗಂಟೆಗಳಲ್ಲಿ ಪ್ರಾಣಾಪಾಯಕಾರಕ ಹುಲಿಯನ್ನು ಹಿಡಿಯಬೇಕೆಂದು ಸರ್ಕಸ್ ಕಂಪನಿ ಮಾಲಕ ಶ್ರೀ ಛತ್ರೆಯವರಿಗೆ ಆದೇಶ ನೀಡಿದಳು, ಇದಕ್ಕೆ ತಪ್ಪಿದಲ್ಲಿ ಹುಲಿಯನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಪೊಲೀಸ್ ಇಲಾಖೆಗೆ ಹುಕುಂ ಮಾಡಿದಳು.
ಸಾಕಿ ಸಲುಹಿ ಪೋಷಣೆ ಮಾಡಿದ್ದರಿಂದ, ಶಂಕರ ನಾಮದ ಹುಲಿಯು ಶ್ರೀ ಕಾಶೀನಾಥ ಪಂತರ ಪಂಚ ಪ್ರಾಣದಂತೆ ಇತ್ತು. ಈ ಕಾರಣದಿಂದ ಚಿಂತೆಯಿಂದ ದುಃಖಸಾಗರದಲ್ಲಿ ಮುಳುಗಿದರು. ಹುಲಿಯ ಪ್ರಾಣಾಹುತಿಯನ್ನು ತಪ್ಪಿಸಲು ಗುರುಗಳಾದ ಶ್ರೀ ಸಿದ್ಧಾರೂಢರನ್ನು ತದೇಕ ಚಿತ್ತದಿಂದ ಧ್ಯಾನ ಮಾಡಿದ ಕೂಡಲೇ ಅವರೆದುರಿಗೆ ಶ್ರೀಗಳು ನಿಂತಂತಾಗಿ '' ಕಾಶಿನಾಥಪಂತ ! ಮುಳ್ಳಿನ ಕಂಟಿಗಳ ಮಧ್ಯದಲ್ಲಿ ಅವಿತುಕೊಂಡ ಹುಲಿ ಇದ್ದಲ್ಲಿಯೇ ತಂಬೂ ಹಾಕಿ ಸರ್ಕಸ್ ನಡೆಸು". ಹುಲಿಯು ಸುರಕ್ಷಿತವಾಗಿ ನಿನ್ನ ಕೈವಶವಾಗುವುದು ಅಂತ ನುಡಿದು ಅದೃಶ್ಯರಾದರು. ಕೂಡಲೇ ಅದೇ ಪ್ರಕಾರ ಆ ಮುಳ್ಳಿನ ಕಂಟಿಗಳ ಸುತ್ತಲೂ ಬೃಹತ್ ತಂಬೂ ನಿಲ್ಲಿಸಿ ಸರ್ಕಸ್ ನೋಡಲು ಮಹಾರಾಣಿಯನ್ನು ಆಹ್ವಾನಿಸಿದನು. ಇದೇ ಸಮಯಕ್ಕೆ ಹುಲಿಯನ್ನು ಹಿಡಿಯುವುದಾಗಿ ತಿಳಿಸಿದನು. ಈ ಆಶ್ಚರ್ಯಕರ ಸರ್ಕಸ್ ನೋಡಲು ಬಹು ದೊಡ್ಡ ಪ್ರಮಾಣದ ಜನರು ಸೇರಿದರು. ಮಹಾರಾಣಿಯರು ತನ್ನ ಪರಿವಾರ ಸಹಿತ ಅಗ್ರಸ್ಥಾನದಲ್ಲಿ ಆಸೀನಳಾದಳು. ಶ್ರೀ ಗುರುಗಳ ಸ್ಮರಣೆ ಮಾಡುತ್ತಾ ಅನೇಕ ಕಸರತ್ತು ಮಾಡಿಸಿ, ಆನೆ, ಕುದುರೆ, ಒಂಟೆ ಈ ಎಲ್ಲ ಪ್ರಾಣಿಗಳ ಆಟ ಆಡಿಸಿದರು. ಕೊನೆಗೆ ಕಂಟಿಯಲ್ಲಿ ಕೂತ ಹುಲಿಯ ಹತ್ತಿರ ಹೋಗಿ ಶಂಕರ ಜಯ ಶಂಕರ ಹೊರಗೆ ಬಾ ಅಂತ ಚಬೂಕಿನ ಸಪ್ಪಳ ಮಾಡುತ್ತಾ ನಿಂತನು, ತಾನು ಕಂಟಿಯಲ್ಲಿ ಕೂತಿರುವೆನೆಂದು ಅರಿವಿಲ್ಲದಲೇ ಸರ್ಕಸ್ ನಡೆದಾಗ ಏಕಾಗ್ರತೆಯಿಂದ ಶ್ರೀ ಕಾಶಿನಾಥನ ದಿಗ್ದರ್ಶನದ ಪ್ರಕಾರ ಓಡಾಡುವಂತೆ ಠಣ್ಣನ ಜಿಗಿಯುತ್ತಾ ಹೊರ ಬಂದು ಪಂಜರದಲ್ಲಿ ಸೇರಿಕೊಂಡಿತು. ಈ ದೃಶ್ಯವನ್ನು ಕಂಡು ಪ್ರೇಕ್ಷಕರು ಅವಾಕ್ಕಾದರು. ಈಗ ಉಲ್ಲಾಸದಿಂದ ಮಹಾರಾಣಿಯು ಹರ್ಷೋದ್ಘಾರಗಳಿಂದ ಈ ಸರ್ಕಸ್ ಕಂಪನಿಯ ಶ್ರೀ ಛತ್ರೆ ಮಹಾನ್ ಚತುರಮತಿಯು ಇಂತಹ ಪುರುಷರನ್ನು ನಾನು ಕಂಡಿಲ್ಲ ಅಂತಾ ಬಹುವಿಧವಾಗಿ ಪ್ರಶಂಸೆ ಮಾಡುತ್ತಾ ಈ ಸಾಹಸಕ್ಕೆ ಆಗಿನ ಕಾಲದ ಅರವತ್ತು ಸಾವಿರ ರೂಪಾಯಿ ಮೌಲ್ಯದ ವಜ್ರದ ಪದಕವನ್ನು ಆತನಿಗೆ ಕೊಟ್ಟು ಸತ್ಕರಿಸಿದಳು.
ಮುಂದೆ ಹುಬ್ಬಳ್ಳಿಗೆ ಬಂದು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯ ವರೆದುರಿಗೆ ಶ್ರೀ ಕಾಶೀನಾಥಪಂಥ ಛತ್ರೆ ಚೀನಾದಲ್ಲಾದ ತನ್ನ ವೃತ್ತಾಂತವನ್ನು ಹೇಳಿದಾಗ ಭಕ್ತರೆಲ್ಲರೂ ಸಂತಸಭರಿತರಾದರು. ಆ ಸಮಯಕ್ಕೆ ಗುರುಮಹಿಮೆಯ ಪುರಾಣ ನಡೆದಿತ್ತು. ಈ ವೃತ್ತಾಂತಕ್ಕೆ ಶ್ರೀ ಸಿದ್ಧಾರೂಢರು ಲಕ್ಷಾರ್ಥ ಹೇಳಿದರು. ಮನೋರೂಪಿ ಮಹಾವ್ಯಾಘ್ರ ಸ್ವೇಚ್ಛೆಯಿಂದ ಹೊರಗೆ ಯಾವಾಗಲೂ ತಿರುಗುತ್ತಾ, ವಿಷಯಗಳೆಂಬ ಮುಳ್ಳಿನ ಕಂಟಿಗಳಲ್ಲಿ ಅಡಗಿ ಕೂಡುವ ಚಪಲತೆಯುಳ್ಳದ್ದಾಗುತ್ತದೆ. ಸದ್ಗುರುವಿನ ದಿಗ್ದರ್ಶನದಲ್ಲಿ ದೃಢವಾದ ವಿಶ್ವಾಸವನ್ನು ಇಟ್ಟು ತದೇಕ ಚಿತ್ತದಿಂದ ನಾಮಸ್ಮರಣೆ ಮಾಡುತ್ತಾ ಇದ್ದಲ್ಲಿ ವಿಷಯಗಳೆಂಬ ಮುಳ್ಳು ಕಂಟಿಯಿಂದ ಮನೋರೂಪಿ ಮಹಾ ವ್ಯಾಘ್ರವು ಠಣ್ಣನೆ ಹಾರಿ ಬಂದು ನಮ್ಮ ಕೈವಶವಾಗುತ್ತದೆ. ಮನೋನಿಗ್ರಹದಿಂದ ಅತ್ಯಂತ ದುಃಖ ನಿವೃತ್ತಿ ಪರಮಾನಂದದಾಯಕ ಮುಕ್ತಿಯ ಸೋಪಾನವನ್ನೇರಲು, ಬಹುಮಾನ ರೂಪಿ ವಜ್ರದ ಪದಕದಂತೆ ಸೌಭಾಗ್ಯ ದೊರೆಯಲು ಕಾರಣವಾಗುವುದು ಅಂತ ಭಕ್ತರಿಗೆಲ್ಲ ಬೋಧಾಮೃತ ಪಾನ ಮಾಡಿದರು.
👇👇👇👇
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
2)Facebook shareಗಾಗಿ👉
3)WhatsApp shareಗಾಗಿ click ಮಾಡಿ📲☎️
«««««ಓಂ ನಮಃ ಶಿವಾಯ »»»»»»»
