ಗುರುನಾಥರ ಅಂತಿಮ ಯಾತ್ರೆ
🌺 ಗುರುನಾಥರ ಅಂತಿಮ ಯಾತ್ರೆ 🌺
ಶ್ರೀಗಳವರ ಅಂತಿಮ ಯಾತ್ರೆಗಾಗಿ ವಿಶೇಷ ಅಲಂಕೃತ ಮತ್ತು ವಿದ್ಯುದ್ದೀಪಗಳ ಸರಮಾಲೆಯಿಂದ ಸಿಂಗರಿಸಿದ ದೊಡ್ಡ ರಥವನ್ನು ಎರಡು ಟ್ರಾಕ್ಟರ್ ಗಳಲ್ಲಿ ಸ್ಥಾಪಿಸಿ ಹುಬ್ಬಳ್ಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದನ್ನು ಜನತೆ ನೋಡಿದರು. ಆ ನೋಟ ಹೃದಯಸ್ಪರ್ಶಿಯಾಗಿತ್ತು, ನಗರದ ನಿವಾಸಿಗಳು ಅಲ್ಲಲ್ಲಿ ಅಂತಿಮ ಗೌರವ ಸಲ್ಲಿಸುವುದಕ್ಕಾಗಿ ಫಲ ಪುಷ್ಟಗಳನ್ನು ಸಲ್ಲಿಸಿದರು. ಮಠದ ಸಂಪ್ರದಾಯದಂತೆ ಈ ಯಾತ್ರೆಯು ಗಣೇಶ ಪೇಟೆಯ ಜಡಿಸಿದ್ದೇಶ್ವರ ಸ್ವಾಮಿಗಳ ಮಠಕ್ಕೆ ಸೂರ್ಯಾಸ್ತ ಸಮಯದಲ್ಲಿ ಬಂದಿತು. ಅಲ್ಲಿ ಭಕ್ತರು ದುಃಖವನ್ನು ತಾಳಲಾರದೆ ಹೃದಯವೇದನೆಯಿಂದ ಮೂರ್ಛಿತರಾಗಿ ಬಿದ್ದರು. ಅಲ್ಲಿ ಅಂತಿಮ ಗೌರವ ಸಲ್ಲಿಸಿದ ನಂತರ ಮೆರವಣಿಗೆ ಮುಂದುವರಿದು ಮಠದ ಕಡೆಗೆ ನಡೆಯಿತು.
ಇತ್ತ ಮಠದ ಟ್ರಸ್ಟ ಕಮೀಟಿಯ ಸದಸ್ಯರಿಗೆ ಚೇರಮನ್ನರು ಸುತ್ತೋಲೆ ಕಳಿಸಿದರು. ಸಭೆ ಸೇರಿತು. ಶ್ರೀ ಗುರುನಾಥರ ಸಮಾಧಿಯನ್ನು ಸಿದ್ದಾರೂಢರ ಮಂದಿರ ಮತ್ತು ಕೈಲಾಸ ಮಂಟಪದ ಮಧ್ಯದಲ್ಲಿ ಮಾಡಬೇಕೆಂದು ಹುಬ್ಬಳ್ಳಿಯ ಹನ್ನೊಂದು ಸದಸ್ಯರು ಲೇಯಿಯಲ್ಲಿ ಬರೆದು ಚೇರಮನ್ನರಿಗೆ ಕೊಟ್ಟು ತಿಳಿಸಿದರು. ಆ ಪ್ರಕಾರ ಠರಾವು ಪಾಸಾಯಿತು. ಆದರೆ ಚೇರಮನ್ನರು ಸಮಾಧಿಯನ್ನು ಮಠದ ಹಿಂದಿರುವ ಸ್ಮಶಾನ ಭೂಮಿಯಲ್ಲಿ ಮಾಡಬೇಕೆಂದು ಯೋಚಿಸಿದ್ದರು. ಅದನ್ನು ಒಪ್ಪದ ಬಹುಜನ ಟ್ರಸ್ಟಿಗಳು ಶ್ರೀಮಠದ ಸಹಸ್ರಾರು ಭಕ್ತರು ಅದನ್ನು ಬಲವಾಗಿ ಪ್ರತಿಭಟಿಸಿದಾಗ, ಅದನ್ನು ಗಮನಿಸಿದ ಶ್ರೀ ಮಠದ ಮುಖ್ಯ ಆಡಳಿತಗಾರ ಮಾನ್ಯ ಜಿಲ್ಲಾ ನ್ಯಾಯಾಧೀಶರು ಧಾರವಾಡ ಇವರು ಮಠಕ್ಕೆ ಬಂದು ಎಲ್ಲವನ್ನು ಕೂಲಂಕುಷವಾಗಿ ವಿಚಾರಿಸಿದಾಗ, ಭಕ್ತರು ತಮ್ಮ ಅಭಿಪ್ರಾಯದಲ್ಲಿ ಅವರಿಗೆ ಹೇಳಿದ್ದೇನೆಂದರೆ.
ಶ್ರೀ ಸಿದ್ಧಾರೂಢರ ನಂತರ ಗುರುನಾಥ ಸ್ವಾಮಿಯವರನ್ನು ಸಿದ್ಧಾರೂಢರೆಂದೇ ಭಾವಿಸಿ ಅವರನ್ನು ಪೂಜಿಸುತ್ತೇವೆಂದು ವಚನ ಕೊಟ್ಟಿದ್ದನ್ನು ಪಾಲಿಸಿದ್ದೇವೆ. ಶ್ರೀ ಸಿದ್ಧಾರೂಢರು ಹೇಳಿದಂತೆ ಶ್ರೀ ಗುರುನಾಥರ ಸಮಾಧಿಯೂ ಈ ಖುಲ್ಲಾ ಜಾಗೆಯಲ್ಲಿ ಆಗಬೇಕು. ಆದ್ದರಿಂದ ಈ ಸ್ಥಳವನ್ನು ಖಲ್ಲಾ ಇಡಲಾಗಿದೆ. ಇದರ ಹೊರತು ಬೇರಿನ್ನಾವ ನಿರ್ಣಯ ತೆಗೆದುಕೊಂಡರೆ, ಅದನ್ನು ಪ್ರಾಣ ತೆತ್ತಾದರೂ ತಡೆಯುತ್ತೇವೆ ಎಂದು ನ್ಯಾಯಾಧೀಶರಿಗೆ ಬಲವಾಗಿ ಪ್ರತಿಪಾದಿಸಿದರು. ಅದನ್ನು ಪರಿಗಣಿಸಿದ ನಂತರ ದಿನಾಂಕ ಹದಿನಾಲ್ಕು ಐದನೆಯ ತಿಂಗಳು ಹತ್ತೊಂಭತ್ತು ನೂರಾ ಅರವತ್ತೆರಡನೆಯ ಇಸ್ವಿಯಲ್ಲಿ ರಾತ್ರಿ ಒಂದು ಗಂಟೆಗೆ ಜಿಲ್ಲಾ ನ್ಯಾಯಾಧೀಶರು ಹುಬ್ಬಳ್ಳಿ ಸಿವಿಲ್ ಕೋರ್ಟಿನಲ್ಲಿ ಕುಳಿತು ಮಧ್ಯರಾತ್ರಿ ಯಲ್ಲಿ ಭಕ್ತರ ಅಪೇಕ್ಷೆಯಂತೆ ಆಜ್ಞೆ ಹೊರಡಿಸಿದರು. ಈ ಆಜ್ಞೆಯ ಪ್ರಕಾರ ಶ್ರೀಗಳ ಸಮಾಧಿಯನ್ನು ಈಗಿರುವ ಸ್ಥಳದಲ್ಲಿಯೇ ಮಾಡಲಾಯಿತು.
👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
